ಭೂಗತ ಲೋಕದ ನೆರಳಲ್ಲಿ ನಲುಗಿದ ಮುಗ್ಧ ಪ್ರೇಮಿಗಳ‌ -ರೇಟಿಂಗ್ : 3.5/5 ****
Posted date: 09 Sat, Dec 2023 02:01:36 PM
ಚಿತ್ರ : ಕೈವ 
ನಿರ್ದೇಶಕ :  ಜಯತೀರ್ಥ
ನಿರ್ಮಾಪಕ : ರವೀಂದ್ರ ಕುಮಾರ್
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಾಹಕಿ : ಶ್ವೇತ ಪ್ರಿಯ
ತಾರಾಗಣ : ಧನವೀರ್ ಗೌಡ, ಮೇಘ ಶೆಟ್ಟಿ , ಮಹಾಂತೇಶ್ , ರಮೇಶ್ ಇಂದಿರಾ, ಜಯರಾಮ್ ಕಾರ್ತಿಕ್, ದಿನಕರ್ ತೂಗುದೀಪ್, ನಂದ ಗೋಪಾಲ್ , ಉಗ್ರಂ ಮಂಜು , ರಾಘು ಶಿವಮೊಗ್ಗ , ಡಾ.ಜಾನ್ವಿ , ಶಿವಾಜಿರಾವ್ ಜಾದವ್, ಹಾಗೂ ಇತರರು...

ಪ್ರೀತಿ ಅನ್ನೋದು ಯಾವಾಗ, ಎಲ್ಲಿ ಹುಟ್ಟುತ್ತೆ  ಅಂತ ಯಾರಿಗೂ ಗೊತ್ತಾಗೋದಿಲ್ಲ. ತೊಂಭತ್ತರ ದಶಕದಲ್ಲಿ ಬೆಂಗಳೂರಿನ ಕೇಂದ್ರಭಾಗದಂತಿದ್ದ ತಿಗಳರಪೇಟೆ ಏರಿಯಾದಲ್ಲಿ  ಹಿಂದೂ ಯುವಕ, ಮುಸ್ಲಿಂ ಯುವತಿಯ ನಡುವೆ ನಡೆದ ಪ್ರೇಮಕಥೆಯೇ ಕೈವ ಚಿತ್ರದ ಕಥಾವಸ್ತು.
 
ಬೆಂಗಳೂರಿನಲ್ಲಿ  ಕರಗ ಉತ್ಸವ ಹೇಗೆ ಪ್ರಾರಂಭವಾಯಿತು ಎಂಬ ವಿವರಣೆಯೊಂದಿಗೆ ಆರಂಭವಾಗುವ ಚಿತ್ರ ನಂತರ ಕೈವನ ಪ್ರೇಮಕಥೆಯೊಂದಿಗೆ ತೆರೆದುಕೊಳ್ಳುತ್ತದೆ. 1984 ರ ಸಮಯದಲ್ಲಿ ನಡೆದ ನೈಜ ಘಟನೆ ಇದಾಗಿದೆ. ಕರಗ ಉತ್ಸವ ಸಂದರ್ಭದಲ್ಲಿ ಹುಟ್ಟಿದ ಪ್ರೇಮಕಥೆಯಲ್ಲಿ ಭೂಗತ ಲೋಕದ ದೊರೆಗಳ ಎಂಟ್ರಿ ಹೇಗಾಯಿತು ಎಂಬುದನ್ನು ಚಿತ್ರದಲ್ಲಿ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ. ಪುಡಿ ರೌಡಿಗಳ ಅಟ್ಟಹಾಸದಲ್ಲಿ ನಲುಗಿದ ಪ್ರೇಮಿಗಳ  ದುರಂತ ಕಥೆಯನ್ನು ಅಷ್ಟೇ ನೈಜವಾಗಿ ತೆರೆದಿಟ್ಟಿದ್ದಾರೆ ನಜರ್ದೇಶಕ‌ ಜಯತೀರ್ಥ. ಕಪಾಲಿ ಚಿತ್ರಮಂದಿರಕ್ಕೆ  ಅಂಟಿಕೊಂಡಿದ್ದ ಗಂಗಾರಾಮ್ ಕಟ್ಟಡ ಕುಸಿದುಬಿದ್ದ ಸಂದರ್ಭದಲ್ಲೇ ಈ ಪಾಪಿಗಳ ಅಟ್ಟಹಾಸಕ್ಕೆ ಈ ಮುಗ್ಧ ಯುವತಿ ಆಹಾರವಾಗುತ್ತಾಳೆ.  ಕೈವಾರದಿಂದ ಜೀವನ ಕಟ್ಟಿಕೊಳ್ಳಲು ತಿಗಳರ ಪೇಟೆಗೆ ಬಂದ ಅನಾಥ ಹುಡುಗ ಕೈವ (ಧನ್ವೀರ್ ಗೌಡ) ತನ್ನ ಗೆಳೆಯ (ಮಾಂತೇಶ್) ಜೊತೆ  ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ.
 
ಧರ್ಮರಾಯನ ಕರಗದ ಸಮಯದಲ್ಲಿ ಪರಿಚಯವಾದ ಸಲ್ಮಾ ( ಮೇಘಾ ಶೆಟ್ಟಿ)ಳನ್ನು ಪ್ರೀತಿಸಿ ಜೀವದಂತೆ ಕಾಪಾಡುತ್ತಾನೆ.
 ಪುಡಿ ರೌಡಿಗಳಾದ ನಂದಗೋಪಾಲ್ , ರಾಘು ಶಿವಮೊಗ್ಗ , ಉಗ್ರಂ ಮಂಜು ಹಾಗೂ‌ ಬ್ರೋಕರ್   ಬಿ.ಎಂ.ಗಿರಿರಾಜ್ ಸೇರಿ ಡುಪ್ಲಿಕೇಟ್ ಟ್ರಾನ್ಸ್ಪೋರ್ಟ್ ಪರ್ಮಿಷನ್, ಕಳ್ಳ ಸಾಗಾಣಿಕೆ ದಂದೆ  ಮಾಡುವವರು. ಆಗಿನ ಭೂಗತ ದೊರೆ ರಾಮಲಾಲ್ (ದಿನಕರ್ ತೂಗುದೀಪ್) ಒಮ್ಮೆ  ಈ ಮೂವರಿಗೂ ಹಫ್ತಾ ನೀಡುವಂತೆ ವಾರ್ನಿಂಗ್ ಕೊಡುತ್ತಾನೆ. ಇದೇ ಸಮಯದಲ್ಲಿ ಮತ್ತೊಬ್ಬ ಡಾನ್  ಹಾಗೂ ಗರಡಿ ಮನೆ ಪೈಲ್ವಾನ್ (ರಮೇಶ್ ಇಂದಿರಾ) ಜೊತೆ ಗಲಾಟೆ ಮಾಡಿಕೊಂಡು ದೇವರಾಜ್  ಜೈಲು ಶಿಕ್ಷೆ ಅನುಭವಿಸುವಂತಾಗುತ್ತದೆ.  ಇದನ್ನೇ ಅಸ್ತ್ರವಾಗಿಸಿಕೊಂಡು ಈ ಮೂವರು ಗೆಳೆಯರ ಗುಂಪು ಪೈಲ್ವಾನ್ ಮುಗಿಸಲು ಸಂಚು ರೂಪಿಸುತ್ತಾರೆ. ಕೈವ ತಂದುಕೊಟ್ಟ ಸೀರೆ ಉಟ್ಟುಕೊಂಡು ಸಲ್ಮಾ  ಕೈವನ ಜೊತೆ ಫೋಟೋ  ತೆಗೆಸಿಕೊಳ್ಳಲು ಮುಂದಾಗುತ್ತಾಳೆ. ಮುಂದೆ ನಡೆಯುವುದೇ ಒಂದಯ ಘೋರ ದುರಂತ.
 
ಮುಂದೆ ಕೈವ ತನ್ನ ಪ್ರೀತಿಯ ಹುಡುಗಿಯ ಬಾಳನ್ನು ಸರ್ವನಾಶ ಮಾಡಿದ ಮೂವರು ರೌಡಿಗಳ ಮೇಲೆ ಯಾವ ರೀತಿ ಸೇಡು ತೀರಿಸಿಕೊಂಡ ಎಂಬುದನ್ನು  ತಿಳಿಯಬೇಕಾದರೆ ನೀವು ಕೈವ ಚಿತ್ರವನ್ನು ವೀಕ್ಷಿಸಬೇಕು.
 
ನಿರ್ದೇಶಕ ಜಯತೀರ್ಥ ಒಂದು ನೈಜ್ಯ ಘಟನೆಯ ಸುತ್ತ ಹೆಣೆದಿರುವ  ಕಥೆಯೇ ರೋಚಕವಾಗಿದೆ. 80ರ ಕಾಲಘಟ್ಟಕ್ಕೆ  ಪೂರಕವಾಗಿ ಕಂಡುಬರುವ ಪರಿಸರ, ನೈಜ ದೃಶ್ಯಾವಳಿಗಳನ್ನು ವಾಸ್ತವಕ್ಕೆ ಹತ್ತಿರವಾಗಿ  ಚಿತ್ರಿಸಿದ್ದಾರೆ.  ಚಿತ್ರದ ಪ್ರಥಮಾರ್ಧದಲ್ಲಿ ಪ್ರೀತಿ, ಧರ್ಮ, ರೌಡಿಗಳ ಅಟ್ಟಹಾಸ ಗಮನ ಸೆಳೆಯುತ್ತದೆ.  ಇನ್ನು ದ್ವಿತೀಯ ಭಾಗದಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದಾರೆ. 
ಈ  ಚಿತ್ರದ ಹೈಲೈಟ್ ಅಂದರೆ ಮಹಿಳಾ ಛಾಯಾಗ್ರಾಹಕಿ ಶ್ವೇತಾಪ್ರಿಯ ಅವರ ಕೈ ಚಳಕ ಸೊಗಸಾಗಿದೆ. ಅದೇ ರೀತಿ ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.  ಸೆಟ್ ವರ್ಕ್ ಸೇರಿದಂತೆ ತಾಂತ್ರಿಕ ಕೆಲಸವೂ ಗಮನ ಸೆಳೆಯುತ್ತದೆ.
 
ನಾಯಕ ಧನ್ವೀರ್ ಗೌಡ ಖಡಕ್ ಲುಕ್ ನಲ್ಲಿ ಕಾಣಿಸಿದ್ದಾರೆ. ನಾಯಕಿ ಮೇಘ ಶೆಟ್ಟಿ ಮಾತು ಬಾರದ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.  ನಂದಗೋಪಾಲ್ , ಉಗ್ರಂ ಮಂಜು, ರಾಘು ಶಿವಮೊಗ್ಗ. ಅದೇ ರೀತಿ ನಾಯಕನ ಗೆಳೆಯನಾಗಿ ಮಾಂತೇಶ್ ಹಿರೇಮಠ ಕೂಡ ಗಮನ ಸೆಳೆಯುತ್ತಾರೆ. ಇನ್ನು ವಿಶೇಷವಾಗಿ ಭೂಗತ ದೊರೆಗಳ ಪಾತ್ರದಲ್ಲಿ ದಿನಕರ್ ತೂಗುದೀಪ್ ಹಾಗೂ ಜಯರಾಮ ಕಾರ್ತಿಕ್  ಸಮರ್ಥವಾಗಿ ನಿಭಾಯಿಸಿದ್ದಾರೆ. ಅಷ್ಟೇ ಅದ್ಭುತವಾಗಿ ಪೈಲ್ವಾನ್ ಪಾತ್ರದಲ್ಲಿ ರಮೇಶ್ ಇಂದಿರಾ ಗಮನ ಸೆಳೆಯುತ್ತಾರೆ. ಇನ್ನು ಬಾರ್ ಗರ್ಲ್  ರೋಸಿ ಪಾತ್ರಧಾರಿ ಡಾ. ಜಾನ್ವಿ , ಇನ್ಸ್ಪೆಕ್ಟರ್ ಪಾತ್ರಧಾರಿ ಅಶ್ವಿನ್ ಹಾಸನ್ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed